Budget 2026-ಬಜೇಟ್ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ,ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ಏನೇಲ್ಲ ಸಿಗಲಿವೆ
<Krushirushi> <Union budget 2026> <Union budget> <Budget> <ಬಜೇಟ್> <ಕೇಂದ್ರ ಬಜೇಟ್> <ಕೇಂದ್ರ ಬಜೇಟ್-2026>
Budget 2026-ಬಜೇಟ್ ನಿರೀಕ್ಷೆಯಲ್ಲಿದ್ದ ರೈತರಿಗೆ ಸಿಹಿಸುದ್ದಿ ಕೊಟ್ಟ ಕೇಂದ್ರ ಸರ್ಕಾರ,ಪಿಎಂ ಕಿಸಾನ್ ಹಣ ಹೆಚ್ಚಳ ಸೇರಿದಂತೆ ಏನೇಲ್ಲ ಸಿಗಲಿವೆ
ಫೆಬ್ರವರಿ 1 ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ನಲ್ಲಿ 'ಪಿಎಂ ಕಿಸಾನ್' ಯೋಜನೆಯ ಸಹಾಯಧನ ವಾರ್ಷಿಕ 6,000 ರೂ. ನಿಂದ 8,000 ರೂ.ಗೆ ಏರಿಸುವ ಸಾಧ್ಯತೆಯಿದೆ. ಏರುತ್ತಿರುವ ಕೃಷಿ ವೆಚ್ಚಗಳಿಂದ ಕಂಗಾಲಾಗಿರುವ ರೈತರು ಈ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ವಿಶೇಷವಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರ ತವರು ರಾಜ್ಯವಾದ ಮಧ್ಯಪ್ರದೇಶದ ರೈತರು ಬೆಂಬಲ ಬೆಲೆ ಏರಿಕೆ, ಸಕಾಲಿಕ ವಿಮೆ ಮತ್ತು ಸಾಲ ಮನ್ನಾಗಾಗಿ ಆಗ್ರಹಿಸುತ್ತಿದ್ದಾರೆ.
ಮುಂಬರುವ ಕೇಂದ್ರ ಬಜೆಟ್ ಅಧಿವೇಶನಕ್ಕೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಬಜೆಟ್ ಮೇಲೆ ದೇಶದ ಅನ್ನದಾತರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ವಿಶೇಷವಾಗಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ' ಯೋಜನೆಯಡಿ ರೈತರಿಗೆ ನೀಡಲಾಗುವ ವಾರ್ಷಿಕ ಸಹಾಯಧನವನ್ನು ಹೆಚ್ಚಿಸಲಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಪಿಎಂ ಕಿಸಾನ್ ಹಣ ಏರಿಕೆ ಸಾಧ್ಯತೆ
ಪ್ರಸ್ತುತ ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕ 6,000 ರೂ. ಸಹಾಯಧನವನ್ನು ಮೂರು ಕಂತುಗಳಲ್ಲಿ (ತಲಾ 2,000 ರೂ.) ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಆದರೆ, ಏರುತ್ತಿರುವ ಬೆಲೆಗಳು ಮತ್ತು ಕೃಷಿ ವೆಚ್ಚಗಳ ಹಿನ್ನೆಲೆಯಲ್ಲಿ ಈ ಮೊತ್ತ ಸಾಲುತ್ತಿಲ್ಲ ಎಂಬುದು ರೈತ ಸಂಘಟನೆಗಳ ವಾದ. ಹೀಗಾಗಿ, ಈ ಬಾರಿಯ ಬಜೆಟ್ನಲ್ಲಿ ಈ ಮೊತ್ತವನ್ನು ವಾರ್ಷಿಕ 8,000 ರೂ. ಗಳಿಗೆ ಹೆಚ್ಚಿಸುವಂತೆ ಬಲವಾದ ಬೇಡಿಕೆ ಕೇಳಿಬಂದಿದೆ.
ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬೀಳದಿದ್ದರೂ, ಬಜೆಟ್ನಲ್ಲಿ ಈ ಬಗ್ಗೆ ಸಿಹಿ ಸುದ್ದಿ ಸಿಗಬಹುದು ಎಂಬ ನಿರೀಕ್ಷೆ ರೈತರಲ್ಲಿದೆ. 2018 ರಲ್ಲಿ ಆರಂಭವಾದ ಈ ಯೋಜನೆ ಕೋಟ್ಯಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆಸರೆಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರ, ಬೀಜ, ಕೀಟನಾಶಕ, ಡೀಸೆಲ್ ಮತ್ತು ಕೃಷಿ ಉಪಕರಣಗಳ ಬೆಲೆ ಗಗನಕ್ಕೇರಿದೆ. ಕೇವಲ 6,000 ರೂ. ರೈತರಿಗೆ ಯಾವ ಮೂಲೆಗೂ ಸಾಲುತ್ತಿಲ್ಲ. ಹೀಗಾಘಿ ಸಹಾಯಧನ ಹೆಚ್ಚಾದರೆ, ರೈತರು ಕೃಷಿಯಲ್ಲಿ ಹೂಡಿಕೆ ಮಾಡಲು ಮತ್ತು ಸಾಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ನಿರೀಕ್ಷೆಯ ಮೂಟೆಯನ್ನೇ ಹೊತ್ತಿದ್ದಾರೆ ಮಧ್ಯಪ್ರದೇಶ ರೈತರು
ದೇಶದ ಕೃಷಿ ಭೂಪಟದಲ್ಲಿ ಮಧ್ಯಪ್ರದೇಶಕ್ಕೆ ಪ್ರಮುಖ ಸ್ಥಾನವಿದೆ. ಗೋಧಿ, ಸೋಯಾಬಿನ್, ಬೇಳೆಕಾಳು ಮತ್ತು ಮಸಾಲೆ ಪದಾರ್ಥಗಳ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಈ ರಾಜ್ಯದ ರೈತರು ಬಜೆಟ್ ಮೇಲೆ ಹೆಚ್ಚಿನ ಭರವಸೆ ಇಟ್ಟಿದ್ದಾರೆ. ಅದಕ್ಕೆ ಮತ್ತೊಂದು ಕಾರಣವೆಂದರೆ, ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರು ಇದೇ ರಾಜ್ಯದ ಸೆಹೋರ್ ಜಿಲ್ಲೆಯವರು.
ಸೆಹೋರ್ ಜಿಲ್ಲೆಯು 'ಶರಬತಿ ಗೋಧಿ'ಗೆ ಹೆಸರುವಾಸಿ. ಆದರೆ ಇಲ್ಲಿನ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. "ನಮ್ಮ ಬೆಳೆಗಳಿಗೆ ಬೆಂಬಲ ಬೆಲೆ (ಎಂಎಸ್ಪಿ) ಸಿಗುತ್ತಿಲ್ಲ. ಈರುಳ್ಳಿ ಬೆಲೆ ಕುಸಿದು ಹೊಲದಲ್ಲೇ ಕೊಳೆಯುತ್ತಿದೆ. ವಿಮೆ ಹಣ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ," ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ನಮ್ಮದೇ ರಾಜ್ಯದ ಸಚಿವರು ಬೇಡಿಕೆ ಈಡೇರಿಸಬಹುದು ಎಂಬ ನಿರೀಕ್ಷೆಯಲ್ಲಿ ಇಲ್ಲಿನ ಅನ್ನದಾತರಿದ್ದಾರೆ.
ರೈತರ ಪ್ರಮುಖ ಬೇಡಿಕೆಗಳೇನು?
- ಬೆಂಬಲ ಬೆಲೆ ಏರಿಕೆ: ಗೋಧಿಗೆ ಕ್ವಿಂಟಾಲ್ಗೆ 3,500-4,000 ರೂ. ಮತ್ತು ಸೋಯಾಬಿನ್ಗೆ 5,000-6,000 ರೂ. ಬೆಲೆ ನಿಗದಿಪಡಿಸಬೇಕು.
- ಸಾಲ ಮನ್ನಾ: ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಸಾಲ ಮನ್ನಾ ಮಾಡುವ ಮೂಲಕ ನೆರವಾಗಬೇಕು.
- ಸಮರ್ಪಕ ವಿಮೆ: ಬೆಳೆ ನಷ್ಟವಾದಾಗ ವಿಮಾ ಪರಿಹಾರ ನೇರವಾಗಿ ಮತ್ತು ತ್ವರಿತವಾಗಿ ರೈತರಿಗೆ ತಲುಪಬೇಕು.
- ಪಿಎಂ ಕಿಸಾನ್ ಹೆಚ್ಚಳ: ವಾರ್ಷಿಕ ಸಹಾಯಧನ ಏರಿಕೆಯಾಗಬೇಕು.
ಮಧ್ಯಪ್ರದೇಶ ಸರ್ಕಾರ 2026 ಅನ್ನು 'ರೈತ ಕಲ್ಯಾಣ ವರ್ಷ' ಎಂದು ಘೋಷಿಸಿದ್ದರೂ, ಯೋಜನೆಗಳು ಕೇವಲ ಕಾಗದದ ಮೇಲಿರದೆ ರೈತರ ಕೈ ಸೇರಬೇಕು ಎಂಬುದು ಅನ್ನದಾತರ ಒತ್ತಾಯವಾಗಿದೆ. ಬಜೆಟ್ ಕೇವಲ ಅಂಕಿ-ಅಂಶಗಳಾಗದೆ, ತಮ್ಮ ಬದುಕಿನ ಬವಣೆ ನೀಗಿಸುವ ಸಂಜೀವಿನಿಯಾಗಲಿ ಎಂದು ಇವರು ಕಾಯುತ್ತಿದ್ದಾರೆ.

