NMNF yojaneಯಡಿ 1,35,733 ರೈತರ ಖಾತೆಗೆ ಎಕರೆಗೆ 2000 ರೂಪಾಯಿ ಜಮಾ

ಸರಿಸುಮಾರು 1,35,733 ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರೈತರಿಗೆ ಪ್ರೋತ್ಸಾಹಧನವಾಗಿ ಪ್ರತಿ ಎಕರೆಗೆ 2,000 ರೂ.ಗಳಂತೆ ಒಟ್ಟು 22.90 ಕೋಟಿ ರೂ. ಮೊತ್ತವನ್ನು ಮೊದಲ ಕಂತಿನ ರೂಪದಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

NMNF yojaneಯಡಿ 1,35,733 ರೈತರ ಖಾತೆಗೆ ಎಕರೆಗೆ 2000 ರೂಪಾಯಿ ಜಮಾ

NMNF yojaneಯಡಿ 1,35,733 ರೈತರ ಖಾತೆಗೆ ಎಕರೆಗೆ 2000 ರೂಪಾಯಿ ಜಮಾ


ವಿಕಸಿತ ಭಾರತ 2047'ರ ಗುರಿಯೊಂದಿಗೆ ಸುಸ್ಥಿರ ಮತ್ತು ಹವಾಮಾನ ವೈಪರೀತ್ಯಕ್ಕೆ ಪೂರಕವಾದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅಡಿಯಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸಿದೆ.

ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ 'ಸಂಜೀವಿನಿ-KSRLM' ಮೂಲಕ ನೈಸರ್ಗಿಕ ಕೃಷಿಯನ್ನು ಒಂದು ಜೀವನೋಪಾಯದ ಮಾರ್ಗವನ್ನಾಗಿ ರಾಜ್ಯವು ರೂಪಿಸುತ್ತಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ (Dr Shalini Rajneesh) ಅವರು ತಿಳಿಸಿದರು.

ರಾಷ್ಟ್ರ ಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ನೈಸರ್ಗಿಕ ಕೃಷಿ ಮತ್ತು ಲಕ್ಪತಿ ದೀದಿಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನೈಸರ್ಗಿಕ ಕೃಷಿಯ ಪ್ರಗತಿಯ ವೇಗ ಆಶದಾಯಕವಾಗಿದ್ದು, ರಾಜ್ಯದ ವಿವಿಧ ಕೃಷಿ ಹವಾಮಾನ ವಲಯಗಳಿಗೆ ಅನುಗುಣವಾಗಿ ನೈಸರ್ಗಿಕ ಕೃಷಿಯನ್ನು ವಿಸ್ತರಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 990 ಕ್ಲಸ್ಟರ್ಗಳನ್ನು ಆಯ್ಕೆ ಮಾಡಲಾಗಿದ್ದು, 49,500 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ರೈತರ ಖಾತೆಗೆ ನೇರವಾಗಿ ಜಮೆ:

ನೈಸರ್ಗಿಕ ಕೃಷಿಯಲ್ಲಿ ರಾಜ್ಯದಲ್ಲಿ ರೈತರ ಪಾಲ್ಗೊಳ್ಳುವಿಕೆ ಆಶಾದಾಯಕವಾಗಿದ್ದು ಸರಿಸುಮಾರು 1,35,733 ರೈತರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರೈತರಿಗೆ ಪ್ರೋತ್ಸಾಹಧನವಾಗಿ ಪ್ರತಿ ಎಕರೆಗೆ 2,000 ರೂ.ಗಳಂತೆ ಒಟ್ಟು 22.90 ಕೋಟಿ ರೂ. ಮೊತ್ತವನ್ನು ಮೊದಲ ಕಂತಿನ ರೂಪದಲ್ಲಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ರಾಜ್ಯದಲ್ಲಿ ನೈಸರ್ಗಿಕ ಕೃಷಿ ಮೂಲಸೌಕರ್ಯ ಪರಿಕರಗಳಿಗಾಗಿ 189 ಜೈವಿಕ ಇನ್ಪುಟ್ ಸಂಪನ್ಮೂಲ ಕೇಂದ್ರಗಳನ್ನು (Bio-input Resource Centres) ಸ್ಥಾಪಿಸಲಾಗಿದೆ. ಮಹಿಳೆಯರು ಕೇವಲ ಫಲಾನುಭವಿಗಳಾಗಿ ಉಳಿಯದೆ, ನೈಸರ್ಗಿಕ ಕೃಷಿಯ ಸಂಶೋಧಕರು ಮತ್ತು ತರಬೇತುದಾರರಾಗಿ ಹೊರಹೊಮ್ಮುವ ಮೂಲಕ ಲಕ್ಷ್ಮಿಪುತ್ರಿಯರನ್ನಾಗಿಸುವ (Lakhpati Didis) ಕನಸು ನನಸಾಗುವತ್ತ ಹೆಜ್ಜೆ ಇಡುತ್ತಿದ್ದಾರೆ.

ನೈಸರ್ಗಿಕ ಕೃಷಿ ಯೋಜನೆಯಡಿ 1,980 ಕೃಷಿ ಸಖಿಯರನ್ನು ಗುರುತಿಸಲಾಗಿದ್ದು, ಇವರು ಗ್ರಾಮ ಮಟ್ಟದಲ್ಲಿ ತಾಂತ್ರಿಕ ನೆರವು ಮತ್ತು ತರಬೇತಿ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಮೇಲಿನ ಖರ್ಚು ಕಡಿಮೆ ಮಾಡುವ ಮೂಲಕ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಯ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಿ, 'ಲಖ್ಪತಿ ದೀದಿ' ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ.

ನೈಸರ್ಗಿಕ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯಲು ನಂಬಿಕಸ್ಥ ಪ್ರಮಾಣೀಕರಣ ವ್ಯವಸ್ಥೆಯನ್ನು ರಾಜ್ಯವು ಜಾರಿಗೆ ತರುತ್ತಿದೆ. ಸಣ್ಣ ರೈತರಿಗೆ ಹೊರೆಯಾಗದಂತೆ ಗುಂಪು ಪ್ರಮಾಣೀಕರಣ ಮತ್ತು ಭಾಗಿತ್ವದ ಖಾತರಿ ವ್ಯವಸ್ಥೆಯನ್ನು ಪಿ.ಜಿ.ಎಸ್ ಮಾದರಿಯನ್ನು (Participatory Guarantee System) ಉತ್ತೇಜಿಸಲಾಗುತ್ತಿದೆ.

ರಾಜ್ಯದ ನೈಸರ್ಗಿಕ ಕೃಷಿಕರ ಬೆಳೆಗಳ ಕುರಿತು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಉತ್ಪನ್ನಗಳ ಮೂಲವನ್ನು ಪತ್ತೆಹಚ್ಚುವ (Traceability) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.

ನೈಸರ್ಗಿಕ ಕೃಷಿಯು ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ವಿಷಮುಕ್ತ ಆಹಾರದ ಮೂಲಕ ಸಾರ್ವಜನಿಕರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಮಣ್ಣಿನ ಸಾವಯವ ಇಂಗಾಲದ ಹೆಚ್ಚಳ ಮತ್ತು ಅಂತರ್ಜಲ ಸಂರಕ್ಷಣೆಗೆ ಇದು ಪೂರಕವಾಗಿದೆ. ಕರ್ನಾಟಕವು ನೈಸರ್ಗಿಕ ಕೃಷಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರಲು ಬದ್ಧವಾಗಿದ್ದು, ಮಹಿಳಾ ನೇತೃತ್ವದ ಈ ಅಭಿಯಾನವು ಸುಸ್ಥಿರ ಅಭಿವೃದ್ಧಿಯ ಮೈಲಿಗಲ್ಲಾಗಲಿದೆ ಎಂದು ಹೇಳಿದರು.

ನೈಸರ್ಗಿಕ ಕೃಷಿ ಎಂದರೇನು?ಕೇಂದ್ರ ಕೃಷಿ ಸಚಿವಾಲಯದ ವ್ಯಾಖ್ಯಾನದ ಪ್ರಕಾರ ನೈಸರ್ಗಿಕ ಕೃಷಿ ಎಂದರೆ "ರಾಸಾಯನಿಕ-ಮುಕ್ತ" ಕೃಷಿ ಪದ್ಧತಿಯಾಗಿದೆ. ಇದು ಕೇವಲ ಜಾನುವಾರು ಮತ್ತು ಸಸ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ತಯಾರಿಸಿದ ಕೃಷಿ ಗೊಬ್ಬರಗಳನ್ನು ಮಾತ್ರ ಬಳಸುತ್ತದೆ. ಇದು ಪ್ರಕೃತಿಯ ನಿಯಮಗಳನ್ನು ಕೃಷಿ ಪದ್ಧತಿಗಳಿಗೆ ಅನ್ವಯಿಸುವ ವ್ಯವಸ್ಥೆಯಾಗಿದೆ. ಪ್ರತಿ ಕೃಷಿ ಪ್ರದೇಶದ ನೈಸರ್ಗಿಕ ಜೀವವೈವಿಧ್ಯತೆಯೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಎಂದರೇನು?ಕೇಂದ್ರ ಪ್ರಾಯೋಜಿತ ಯೋಜನೆಯಾದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನ್ನು, ಸಾಂಪ್ರದಾಯಿಕ ಜ್ಞಾನದಲ್ಲಿ ಬೇರೂರಿರುವ ರಾಸಾಯನಿಕ-ಮುಕ್ತ, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು ಪ್ರಾರಂಭಿಸಲಾಗಿದೆ. ಈ ಯೋಜನೆಯು ರೈತರಿಗೆ ತರಬೇತಿ ನೀಡುವ ಮೂಲಕ, ಆರ್ಥಿಕ ಪ್ರೋತ್ಸಾಹಕಗಳನ್ನು ಒದಗಿಸುವ ಮೂಲಕ ಮತ್ತು ಜೈವಿಕ ಸಂಪನ್ಮೂಲ ಕೇಂದ್ರಗಳಂತಹ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುವ, ರೈತರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಹವಾಮಾನ ಸ್ಥಿತಿಸ್ಥಾಪಕ ಪರಿಸರ ವ್ಯವಸ್ಥೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಇದು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಬಾಹ್ಯ ರಾಸಾಯನಿಕಗಳನ್ನು ಅವಲಂಬಿಸುವ ಬದಲು, ಸ್ಥಳೀಯ ಸಂಪನ್ಮೂಲಗಳಾದ ನಾಟಿ ಹಸುಗಳ ಸಗಣಿ ಮತ್ತು ಗಂಜಲವನ್ನು ಆಧರಿಸಿದ ವ್ಯವಸ್ಥೆಗೆ ಸಾಂಪ್ರದಾಯಿಕ ಕೃಷಿಯಿಂದ ಬದಲಾವಣೆ ಮಾಡಲು ಪ್ರಯತ್ನಿಸುತ್ತದೆ. ಭಾರತದ ಕೃಷಿ ಪದ್ಧತಿಗಳನ್ನು ಸುಸ್ಥಿರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುರಕ್ಷಿತ ಆಹಾರದ ಕಡೆಗೆ ವೈಜ್ಞಾನಿಕವಾಗಿ ಬೆಂಬಲಿತ ವಿಧಾನಗಳೊಂದಿಗೆ ಬಲಪಡಿಸುವ ದೃಷ್ಟಿಯಿಂದ, ಕೇಂದ್ರ ಸಚಿವ ಸಂಪುಟವು ನವೆಂಬರ್ 25, 2024 ರಂದು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ಗೆ ಅನುಮೋದನೆ ನೀಡಿದೆ.

ಯೋಜನೆಯ ಪ್ರಮುಖ ಗುರಿಗಳು

  1. ವಿಸ್ತರಣೆ: 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಆರಂಭಿಸುವುದು.
  2. ಕ್ಲಸ್ಟರ್‌ಗಳು: 15,000 ಕ್ಲಸ್ಟರ್‌ಗಳನ್ನು ಸ್ಥಾಪಿಸುವುದು.
  3. ರೈತರಿಗೆ ತಲುಪುವಿಕೆ: 1 ಕೋಟಿ ರೈತರಲ್ಲಿ ನೈಸರ್ಗಿಕ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು.
  4. ಜೈವಿಕ ಸಂಪನ್ಮೂಲ ಕೇಂದ್ರಗಳು: 10,000 ಕೇಂದ್ರಗಳನ್ನು ಸ್ಥಾಪಿಸಿ ಸುಲಭವಾಗಿ ಸೌಲಭ್ಯಗಳನ್ನು ಒದಗಿಸುವುದು.
  5. ಬೆಂಬಲ: ಸರಳ ಪ್ರಮಾಣೀಕರಣ ವ್ಯವಸ್ಥೆ ಮತ್ತು ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ರಾಷ್ಟ್ರೀಯ ಬ್ರ್ಯಾಂಡ್ ರಚಿಸುವುದು.


ರೈತರಿಗೆ ಹಣಕಾಸಿನ ನೆರವು ಮತ್ತು ಪ್ರಯೋಜನಗಳುರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಉತ್ಪಾದನೆ-ಆಧಾರಿತ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತದೆ.
1. ನೇರ ಆರ್ಥಿಕ ಪ್ರಯೋಜನಗಳು
ಪ್ರೋತ್ಸಾಹಧನ: ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅನುಸರಿಸಲು ಮತ್ತು ಜಾನುವಾರುಗಳನ್ನು ನಿರ್ವಹಿಸಲು ರೈತರಿಗೆ ಎರಡು ವರ್ಷಗಳವರೆಗೆ ಪ್ರತಿ ವರ್ಷ ಎಕರೆಗೆ 4,000 ರೂ. ಪ್ರೋತ್ಸಾಹಧನ ನೀಡಲಾಗುತ್ತದೆ.
ವೆಚ್ಚ ಕಡಿತ: ರಾಸಾಯನಿಕ ಆಧಾರಿತ ಬಳಕೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಕೃಷಿ ವೆಚ್ಚವು ಗಣನೀಯವಾಗಿ ಕಡಿಮೆಯಾಗುತ್ತದೆ.
2. ಕೃಷಿ ಮತ್ತು ಪರಿಸರ ವ್ಯವಸ್ಥೆಯ ಪ್ರಯೋಜನಗಳು
ಮಣ್ಣಿನ ಆರೋಗ್ಯ: ನೈಸರ್ಗಿಕ ಕೃಷಿಯು ಮಣ್ಣಿನ ಜೈವಿಕತೆಯನ್ನು ಹೆಚ್ಚಿಸಿ, ಮಣ್ಣನ್ನು ಆರೋಗ್ಯಕರ ಮತ್ತು ಹೆಚ್ಚು ಸ್ಥಿತಿಸ್ಥಾಪಕವನ್ನಾಗಿ ಮಾಡುತ್ತದೆ.

  • ಆದಾಯ ಹೆಚ್ಚಳ: ಕಡಿಮೆ ವೆಚ್ಚ ಮತ್ತು ಉತ್ತಮ ಇಳುವರಿಯಿಂದಾಗಿ ರೈತರು ಹೆಚ್ಚಿನ ನಿವ್ವಳ ಆದಾಯವನ್ನು ಪಡೆಯುತ್ತಾರೆ.
  • ಹವಾಮಾನ ಸ್ಥಿತಿಸ್ಥಾಪಕತ್ವ: ಜೈವಿಕ ವೈವಿಧ್ಯತೆ ಮತ್ತು ಮಣ್ಣಿನ ಆರೋಗ್ಯ ವೃದ್ಧಿಸುವುದರಿಂದ ಬರಗಾಲ ಮತ್ತು ಪ್ರವಾಹದಂತಹ ತೀವ್ರ ಹವಾಮಾನ ಘಟನೆಗಳನ್ನು ಎದುರಿಸಲು ಕೃಷಿಭೂಮಿ ಹೆಚ್ಚು ಸಮರ್ಥವಾಗುತ್ತದೆ.
  • ಜೈವಿಕ ಸಂಪನ್ಮೂಲ ಕೇಂದ್ರಗಳು: ಜೀವಾಮೃತ ಮತ್ತು ಬೀಜಾಮೃತದಂತಹ ನೈಸರ್ಗಿಕ ಪೋಷಕಾಂಶಗಳನ್ನು ಸುಲಭವಾಗಿ ಲಭ್ಯವಾಗುವಂತೆ ಜೈವಿಕ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.


ರೈತರಿಗೆ ಯೋಜನೆಯ ಪ್ರಯೋಜನಗಳು

  • ನೈಸರ್ಗಿಕ ಕೃಷಿ ಪದ್ಧತಿಗಳು ರೈತರಿಗೆ ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಹೊರಗಿನಿಂದ ಖರೀದಿಸಿದ ಕೃಷಿ ರಸಗೊಬ್ಬರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
  • ಇದರ ಜೊತೆಗೆ, ಇದು ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಗುಣಮಟ್ಟವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಜಲಾವೃತ, ಪ್ರವಾಹ, ಬರಗಾಲ ಇತ್ಯಾದಿ ಹವಾಮಾನ ಅಪಾಯಗಳಿಗೆ ಒಗ್ಗಿಕೊಳ್ಳಲು ನೆರವಾಗಲಿದೆ.
  • ಈ ಪದ್ಧತಿಗಳು ರಸಗೊಬ್ಬರಗಳು, ಕೀಟನಾಶಕಗಳು ಇತ್ಯಾದಿಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಅಪಾಯಗಳನ್ನು ಕಡಿಮೆ ಮಾಡುತ್ತವೆ ಮತ್ತು ರೈತರ ಕುಟುಂಬಕ್ಕೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುತ್ತವೆ.

ಮಿಷನ್‌ನ ಅನುಷ್ಠಾನ ಹೇಗೆ?

  • ನೈಸರ್ಗಿಕ ಕೃಷಿಯು ಜ್ಞಾನ-ಆಧಾರಿತ ಪದ್ಧತಿಯಾಗಿರುವುದರಿಂದ, ಮಿಷನ್ ರೈತರಿಗೆ ನಿರಂತರ ಬೆಂಬಲವನ್ನು ಒದಗಿಸುತ್ತದೆ. ನೈಸರ್ಗಿಕ ಕೃಷಿ ಮಾಡುವ ರೈತರ ಕ್ಷೇತ್ರಗಳಿಂದ ವೈಜ್ಞಾನಿಕವಾಗಿ ಪಡೆದ ಜ್ಞಾನದ ಮೇಲೆ ಮಿಷನ್ ಗಮನಹರಿಸುತ್ತದೆ ಮತ್ತು ನಿರಂತರವಾದ ಪ್ರಾಯೋಗಿಕ ಬೆಂಬಲ ನೀಡುತ್ತದೆ.
  • ತರಬೇತಿ ಮತ್ತು ಪ್ರಾತ್ಯಕ್ಷಿಕೆ: 2,000 ಮಾದರಿ ಪ್ರಾತ್ಯಕ್ಷಿಕೆ ಫಾರ್ಮ್‌ಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು (KVKs) ಮತ್ತು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗುವುದು. 18.75 ಲಕ್ಷ ರೈತರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
  • ಸಮುದಾಯದ ಪಾಲ್ಗೊಳ್ಳುವಿಕೆ: ಜಾಗೃತಿ ಮತ್ತು ಸಹಾಯಕ್ಕಾಗಿ 30,000 ಕೃಷಿ ಸಖಿ/ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗುತ್ತದೆ.
  • ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್: ರಾಸಾಯನಿಕ ಮುಕ್ತ ಉತ್ಪನ್ನಗಳಿಗೆ ಸರಳವಾದ ಪ್ರಮಾಣೀಕರಣ ಪ್ರಕ್ರಿಯೆ ಮತ್ತು ಏಕೈಕ ರಾಷ್ಟ್ರೀಯ ಬ್ರ್ಯಾಂಡ್ ಅನ್ನು ರಚಿಸುವ ಮೂಲಕ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸಲಾಗುತ್ತದೆ.


ಅರ್ಹತಾ ಮಾನದಂಡಗಳು ಏನು?

  • ಭಾರತದಾದ್ಯಂತ ಇರುವ ಎಲ್ಲಾ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
  • ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ದೊಡ್ಡ ರೈತರು ಸಹ ಭಾಗವಹಿಸಬಹುದು.
  • ನಿರ್ದಿಷ್ಟ ಬೆಂಬಲ ಮತ್ತು ಪ್ರೋತ್ಸಾಹಧನವನ್ನು ಪಡೆಯಲು, ರೈತರು ಗರಿಷ್ಠ ಒಂದು ಎಕರೆ ಪ್ರದೇಶದಲ್ಲಿ ಈ ಪದ್ಧತಿಯನ್ನು ಪ್ರಾರಂಭಿಸಬಹುದು.
  • ಈ ಯೋಜನೆಗೆ ಸೇರಲು ಯಾವುದೇ ನಿರ್ದಿಷ್ಟ ಶೈಕ್ಷಣಿಕ ಅರ್ಹತೆಯ ಅಗತ್ಯವಿರುವುದಿಲ್ಲ.
  • ಸಂಶೋಧನಾ ಸಂಸ್ಥೆಗಳು, ಎನ್‌ಜಿಒಗಳು, ಸಮುದಾಯ ಸಂಘಟನೆಗಳು, ಗ್ರಾಮೀಣ ಕೃಷಿ ಉದ್ಯಮಿಗಳು ಸಹ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ?ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೈತರು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಫ್‌ಲೈನ್ ಪ್ರಕ್ರಿಯೆ

  • ಯೋಜನೆಗೆ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಲು ನಿಮ್ಮ ಸ್ಥಳೀಯ ಜಿಲ್ಲಾ ಪಂಚಾಯತಿಯ ಅಧಿಕಾರಿಯನ್ನು ಸಂಪರ್ಕಿಸಿ.
  • ಅಧಿಕಾರಿ ನಿಮ್ಮ ವಿವರಗಳನ್ನು ಮತ್ತು ಯೋಜನಾ ವರದಿಯನ್ನು ರಾಜ್ಯ ಕೃಷಿ ಇಲಾಖೆಗೆ ಸಲ್ಲಿಸುತ್ತಾರೆ.
  • ರಾಜ್ಯ ಕೃಷಿ ಇಲಾಖೆ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ.
  • ರಾಜ್ಯದ ಯೋಜನೆಗೆ ಅನುಮೋದನೆ ದೊರೆತು ಹಣ ಬಿಡುಗಡೆಯಾದ ನಂತರ ನಿಮಗೆ ಆರ್ಥಿಕ ನೆರವು ಸಿಗುತ್ತದೆ.

ಆನ್‌ಲೈನ್ ಪ್ರಕ್ರಿಯೆ

  • ರಾಷ್ಟ್ರೀಯ ನೈಸರ್ಗಿಕ ಕೃಷಿ ವೆಬ್‌ಸೈಟ್‌ನ ನೋಂದಣಿ ಪುಟ naturalfarming.dac.gov.in ಕ್ಕೆ ಭೇಟಿ ನೀಡಿ.
  • ವೈಯಕ್ತಿಕ ಮತ್ತು ಕೃಷಿ ವಿವರಗಳೊಂದಿಗೆ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ನಿಮ್ಮ ಮಾಹಿತಿಯನ್ನು ಪರಿಶೀಲಿಸಿ ಮತ್ತು ಅದನ್ನು ಸಲ್ಲಿಸಿ.

ಅಗತ್ಯ ದಾಖಲೆಗಳು

  • ಆಧಾರ್ ಸಂಖ್ಯೆ
  • ಭೂಮಿ ದಾಖಲೆಗಳು
  • ಬ್ಯಾಂಕ್ ವಿವರಗಳು
  • ಛಾಯಾಚಿತ್ರಗಳು
  • ಜಾತಿ ಪ್ರಮಾಣಪತ್ರ (ಎಸ್ಸಿ/ಎಸ್ಟಿ ಅರ್ಜಿದಾರರಿಗೆ ಮಾತ್ರ)