ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ; ಏನಿದು ತಂತ್ರಾಂಶ? ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ಪಡೆಯುವುದು ಹೇಗೆ?
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ; ಏನಿದು ತಂತ್ರಾಂಶ? ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ಪಡೆಯುವುದು ಹೇಗೆ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪಂಚತಂತ್ರ ಸಾಫ್ಟ್ವೇರ್ನ ನವೀಕರಿಸಿದ ಆವೃತ್ತಿಯಾದ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದೆ. ಈ ಉಪಕ್ರಮದ ಮುಖ್ಯ ಉದ್ದೇಶವು ಗ್ರಾಮೀಣ ಕರ್ನಾಟಕದ 97 ಲಕ್ಷಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ, ಅವುಗಳನ್ನು ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವುದು ಮತ್ತು ಆಸ್ತಿ ವಹಿವಾಟುಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದಾಗಿದೆ. ಈ ವ್ಯವಸ್ಥೆಯು ಕಾವೇರಿ 2.0 ಸಾಫ್ಟ್ವೇರ್ನೊಂದಿಗೆ ಸಂಯೋಜನೆಗೊಂಡಿದ್ದು, ನೋಂದಣಿಯನ್ನು ಸರಳಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಏನಿದು ಇ-ಸ್ವತ್ತು 2.0 ತಂತ್ರಾಂಶ; ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ಆಡಳಿತ ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಸುಧಾರಿತ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿದೆ. ಈ ಹೊಸ ಉಪಕ್ರಮವು 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಸಕ್ರಮಗೊಳಿಸಿ ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ. ಇದು ಅಸ್ತಿತ್ವದಲ್ಲಿರುವ ಪಂಚತಂತ್ರ ಸಾಫ್ಟ್ವೇರ್ನ ನವೀಕರಿಸಿದ ಆವೃತ್ತಿಯಾಗಿದೆ.
ಏನಿದು ಇ- ಇ-ಸ್ವತ್ತು 2.0 ತಂತ್ರಾಂಶ
ಇ-ಸ್ವತ್ತು ಎಂಬುದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನಿರ್ವಹಿಸುವ ಒಂದು ಆನ್ಲೈನ್ ಪೋರ್ಟಲ್ ಆಗಿದ್ದು, ಗ್ರಾಮೀಣ ಪ್ರದೇಶದ ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ನಿರ್ವಹಿಸಲು ಸಹಕಾರಿಯಾಗಿದೆ. ಇದರ ಪ್ರಮುಖ ಉದ್ದೇಶ ಆಸ್ತಿ ವಹಿವಾಟುಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು, ವಂಚನೆ ಮತ್ತು ಅನಧಿಕೃತ ನಿವೇಶನಗಳ ನೋಂದಣಿಯನ್ನು ನಿಯಂತ್ರಿಸುವುದಾಗಿದೆ. ಇ-ಸ್ವತ್ತು ಗ್ರಾಮೀಣ ಭಾಗದಲ್ಲಿರುವ ಕೃಷಿಯೇತರ ಖಾಲಿ ಜಾಗಗಳು ಮತ್ತು ಮನೆ ನಿರ್ಮಾಣ ಮಾಡಿರುವ ಜಾಗಗಳಿಗೆ ಅಧಿಕೃತ ಮಾಲೀಕತ್ವದ ಪ್ರಮಾಣ ಪತ್ರವನ್ನು ಡಿಜಿಟಲ್ ರೂಪದಲ್ಲಿ ಹೊಂದುವುದಾಗಿದೆ. ಈ ಪೋರ್ಟಲ್ ಮೂಲಕ ನಾಗರಿಕರು ಫಾರ್ಮ್-9 ಮತ್ತು ಫಾರ್ಮ್-11 ಎಂಬ ಪ್ರಮುಖ ಇ-ಖಾತಾ ದಾಖಲೆಗಳನ್ನು ಪಡೆಯಬಹುದಾಗಿದೆ.
97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳಿಗೆ ಇ-ಖಾತಾ ನೀಡುವ ಗುರಿ
ಆರಂಭಿಕ ಹಂತದಲ್ಲಿ, ಪಂಚಾಯತ್ ರಾಜ್ ಇಲಾಖೆಯು 6.5 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಈ ವ್ಯಾಪ್ತಿಯೊಳಗೆ ತರಲು ಗಮನಹರಿಸುತ್ತಿದೆ. ಈ ಇ-ಸ್ವತ್ತು ಪ್ರಮಾಣ ಪತ್ರದಲ್ಲಿ ಆ ಜಾಗದ ಜಿಪಿಎಸ್ ಫೋಟೋ, ಒಟ್ಟು ವಿಸ್ತೀರ್ಣ, ಮತ್ತು ಮಾಲೀಕರ ಸಂಪೂರ್ಣ ವಿವರಗಳಂತಹ ಮಾಹಿತಿಯನ್ನು ಡಿಜಿಟಲ್ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ವಿತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರವು ಇ-ಸ್ವತ್ತು ಉಪಕ್ರಮಕ್ಕೆ ವಿಶೇಷ ಬೆಂಬಲ ವ್ಯವಸ್ಥೆಯನ್ನು ಸ್ಥಾಪಿಸಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಈ ಕಾರ್ಯಕ್ರಮವು ರಾಜ್ಯದ 97 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಸಕ್ರಮಗೊಳಿಸಿ ಅಧಿಕೃತ ತೆರಿಗೆ ವ್ಯಾಪ್ತಿಗೆ ತರುವ ಗುರಿ ಹೊಂದಿದೆ.
ಪಾರದರ್ಶಕತೆ: ಇ-ಸ್ವತ್ತು ವೇದಿಕೆ ಆಸ್ತಿ ವಿವರಗಳನ್ನು ಡಿಜಿಟಲ್ ದಾಖಲೆಗಳೊಂದಿಗೆ ಸಂಯೋಜಿಸಿ, ದಾಖಲಾತಿಯನ್ನು ಸುಗಮಗೊಳಿಸುತ್ತದೆ, ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಮತ್ತು ಮಾಲೀಕತ್ವದ ಪರಿಶೀಲನೆಯನ್ನು ಸರಳಗೊಳಿಸುತ್ತದೆ.
ಆಸ್ತಿ ಸಕ್ರಮಗೊಳಿಸುವಿಕೆ: ಸುಮಾರು 90 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಆಸ್ತಿಗಳನ್ನು ಇ-ಖಾತಾ ಮೂಲಕ ಅಧಿಕೃತ ತೆರಿಗೆ ವ್ಯಾಪ್ತಿಗೆ ತರಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
ಸೇವೆಗಳ ಪುನರಾರಂಭ: ಇ-ಸ್ವತ್ತು 2.0 ಪ್ರಾರಂಭದಿಂದಾಗಿ, ಕೆಲವು ಪ್ರದೇಶಗಳಲ್ಲಿ ಸ್ಥಗಿತಗೊಂಡಿದ್ದ ಫಾರ್ಮ್ 11B ಖಾತಾ ವಿತರಣೆ ಮತ್ತು ನಿವೇಶನ ನೋಂದಣಿಯಂತಹ ಸೇವೆಗಳು ಪುನರಾರಂಭಗೊಂಡಿವೆ.
ನೋಂದಣಿ ಇಲಾಖೆಯೊಂದಿಗೆ ಸಂಯೋಜನೆ: ಈ ವೇದಿಕೆಯು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ಸಾಫ್ಟ್ವೇರ್ನೊಂದಿಗೆ ಸಂಯೋಜನೆಗೊಂಡಿದ್ದು, ಕೃಷಿಯೇತರ ಆಸ್ತಿಗಳ ಮಾರಾಟ ನೋಂದಣಿಯನ್ನು ತಡೆರಹಿತವಾಗಿ ಮಾಡಲು ಸಹಾಯ ಮಾಡುತ್ತದೆ.
ಫಾರ್ಮ್ 9 ಎಂದರೇನು?
ಫಾರ್ಮ್ 9 ಎಂದರೆ, ಗ್ರಾಮೀಣ ಕರ್ನಾಟಕದ ಕೃಷಿಯೇತರ ಆಸ್ತಿಗಳಿಗೆ ಅಗತ್ಯವಾದ ಒಂದು ಕಾನೂನು ದಾಖಲೆಯಾಗಿದೆ. ಇ-ಸ್ವತ್ತು ಪೋರ್ಟಲ್ ಅಡಿಯಲ್ಲಿ ಗ್ರಾಮ ಪಂಚಾಯತ್ನಿಂದ ನೀಡಲಾದ ಈ ದಾಖಲೆಯು, ಕೃಷಿಯೇತರ ಆಸ್ತಿಯ ಮಾಲೀಕತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಯೇತರ ಭೂಮಿಯನ್ನು ಖರೀದಿ ಅಥವಾ ಮಾರಾಟ ಮಾಡುವಾಗ ಇದು ಕಡ್ಡಾಯ. ಈ ಫಾರ್ಮ್ ಇಲ್ಲದೆ ಆಸ್ತಿ ವಹಿವಾಟು ಕಾನೂನುಬದ್ಧವಾಗಿ ಮಾನ್ಯವಾಗಿರುವುದಿಲ್ಲ.
ಇ-ಖಾತಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಪ್ರಶ್ನೆಗಳು ಮತ್ತು ತಾಂತ್ರಿಕ ಸಮಸ್ಯೆಗಳನ್ನು ನಿಭಾಯಿಸಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಯಶವಂತಪುರದಲ್ಲಿ ಖಾಸಗಿ ಸಂಸ್ಥೆಯ ಮೂಲಕ ವಿಶೇಷ ಕಾಲ್ ಸೆಂಟರ್ ಅನ್ನು ಸ್ಥಾಪಿಸಿದೆ. ಆರಂಭಿಕ ಹಂತದಲ್ಲಿ ಕಾಲ್ ಸೆಂಟರ್ಗೆ ಸಹಾಯ ಮಾಡಲು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಒಟ್ಟು 34 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನುನಿಯೋಜಿಸಲಾಗಿದೆ. ಈ ಪಿಡಿಒಗಳು ಆಪರೇಟರ್ಗಳಿಗೆ ಇ-ಸ್ವತ್ತು ಪೋರ್ಟಲ್ ಮತ್ತು ನಿಯಮಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು, ಇ-ಖಾತಾ ರಚಿಸುವ ವಿಧಾನಗಳನ್ನು ವಿವರಿಸಲು ಮತ್ತು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡಲಿದ್ದಾರೆ. ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ ಅರುಂಧತಿ ಚಂದ್ರಶೇಖರ್ ಅವರ ಪ್ರಕಾರ, ಪ್ರತಿ ಪಿಡಿಒ ಡಿಸೆಂಬರ್ 2 ರಿಂದ ಜನವರಿ 4 ರವರೆಗೆ ಸರದಿ ಆಧಾರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆ ನಂತರ ಕಾಲ್ ಸೆಂಟರ್ ತಂಡವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

