ಭಾಗ್ಯಲಕ್ಷ್ಮಿ' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 11,944 ಯುವತಿಯರು ಫಲಾನುಭವಿಗಳಾಗಿದ್ದಾರೆ.

ಭಾಗ್ಯಲಕ್ಷ್ಮಿ' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 11,944 ಯುವತಿಯರು ಫಲಾನುಭವಿಗಳಾಗಿದ್ದಾರೆ.

ಭಾಗ್ಯಲಕ್ಷ್ಮಿ' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 11,944 ಯುವತಿಯರು ಫಲಾನುಭವಿಗಳಾಗಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಪ್ರೋತ್ಸಾಹಿಸುವುದು ಮತ್ತು ಅವರ ಸ್ಥಾನಮಾನವನ್ನು ಸುಧಾರಿಸುವ ಧ್ಯೇಯೋದ್ದೇಶದಿಂದ ಜಾರಿಗೊಳಿಸಲಾಗಿದ್ದ 'ಭಾಗ್ಯಲಕ್ಷ್ಮಿ' ಯೋಜನೆಯಡಿ ಜಿಲ್ಲೆಯಲ್ಲಿ ಮೊದಲ ಬಾರಿಗೆ 11,944 ಯುವತಿಯರು ಫಲಾನುಭವಿಗಳಾಗಿದ್ದಾರೆ.

18 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಈ ಯೋಜನೆಯ ಲಾಭ ಈಗ ಬರುವುದಕ್ಕೆ ಆರಂಭವಾಗಿದೆ. ಆಗ ತಮ್ಮ ಹೆಣ್ಣು ಮಕ್ಕಳ ಕುರಿತು ನೋಂದಣಿ ಮಾಡಿಸಿ ಬಾಂಡ್‌ ಪಡೆದಿದ್ದವರು ಪ್ರಯೋಜನ ಗಳಿಸುತ್ತಿದ್ದಾರೆ. 'ಪರಿಪಕ್ವ' ಹಣವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ 2006-2007ನೇ ಸಾಲಿನಲ್ಲಿ ಜಾರಿಗೊಂಡಿತ್ತು. ಈಗ 18 ವರ್ಷ ಪೂರ್ಣಗೊಂಡ ಹೆಣ್ಣು ಮಕ್ಕಳಿಗೆ ಹಣ ಪಾವತಿಸಲಾಗುತ್ತಿದೆ. 2024ರಲ್ಲಿ ಅವಧಿ ಮುಗಿದಿರುವ ಒಟ್ಟು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಇದು ಫಲಾನುಭವಿಗಳಿಗೆ ಶಿಕ್ಷಣ ಸೇರಿದಂತೆ ಹಲವು ರೀತಿಯಲ್ಲಿ ಅನುಕೂಲಕ್ಕೆ ಬರುತ್ತಿದೆ.

ನೇರವಾಗಿ ಜಮಾ:

'ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಫಲಾನುಭವಿಗಳಿಗೆ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುತ್ತಿದೆ. ಆಗ ಬಾಂಡ್‌ ಪಡೆದಿದ್ದವರಿಗೆ ಮೊದಲಿಗೆ ₹ 32ಸಾವಿರವನ್ನು ಪಾವತಿಸಲಾಗುತ್ತಿದೆ. ಎಲ್ಲರ ಮಾಹಿತಿಯನ್ನೂ ಸಂಗ್ರಹಿಸಿ ದಾಖಲೆಗಳ ಸಹಿತ ನಿಗದಿತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದೇವೆ. 9,713 ಮಂದಿಯ ಮಾಹಿತಿಯನ್ನು ದಾಖಲಿಸಲಾಗಿದೆ. ಅವರಿಗೆ ಪರಿಪಕ್ವ ಹಣ ಸಂದಾಯವಾಗಿದೆ. ಉಳಿದವರಿಗೂ ಹಂತ-ಹಂತವಾಗಿ ಹಣ ದೊರೆಯಲಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಕುಟುಂಬ ಮತ್ತು ಸಮಾಜದಲ್ಲಿ ಹೆಣ್ಣು ಮಗುವಿನ ಘನತೆ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಿದ್ದರು. 2006-07ರಲ್ಲಿ ನೋಂದಣಿ ಮಾಡಿಸಿದವರಿಗೆ 18 ವರ್ಷ ಪೂರೈಸಿದ ನಂತರ ₹32,351 ದೊರೆಯಲಿದೆ. 2008ರ ಆ.1ರಿಂದ 2020ರ ಮಾರ್ಚ್ ಅಂತ್ಯದವರೆಗಿನ ಅವಧಿಯಲ್ಲಿ ನೋಂದಾಯಿಸಿದವರಿಗೆ ಸಿಗುವ ಅಂದಾಜು ಮೊತ್ತವನ್ನು ₹1 ಲಕ್ಷಕ್ಕೆ ಏರಿಕೆ ಮಾಡಲಾಯಿತು. ಅದು ಪರಿಪಕ್ವಗೊಂಡಾಗ ಫಲಾನುಭವಿಗಳಿಗೆ ಹಣ ದೊರೆಯುತ್ತದೆ ಎಂದು ಅಧಿಕಾರಿಗಳು ಹೇಳಿದರು.

'ನೋಂದಣಿಯಾದ ಹೆಣ್ಣುಮಕ್ಕಳು ಕಡ್ಡಾಯವಾಗಿ 9ನೇ ತರಗತಿವರೆಗೆ ಶಿಕ್ಷಣ ಪಡೆದಿರಬೇಕು. ಬಾಲಕಾರ್ಮಿಕರಾಗಿರಬಾರದು, ಬಾಲ್ಯವಿವಾಹ ಆಗಿರಬಾರದು, ಪಾಲಕರು ಕಡ್ಡಾಯವಾಗಿ ಎರಡು ಮಕ್ಕಳನ್ನು ಮಾತ್ರ ಹೊಂದಿರಬೇಕು. ಹೆಚ್ಚು ಮಕ್ಕಳು ಇದ್ದಲ್ಲಿ ಅವರು ಯೋಜನೆಯಿಂದ ವಂಚಿತರಾಗುತ್ತಾರೆ' ಎಂದು ತಿಳಿಸಿದರು.

ಏನಿದು ಯೋಜನೆ?

ಹೆಣ್ಣು ಭ್ರೂಣ ಹತ್ಯೆ ತಡೆಯಲು ಬಾಲ್ಯವಿವಾಹ ಪದ್ಧತಿ ನಿಯಂತ್ರಿಸಲು ಹೆಣ್ಣು ಮಗುವಿನ ಶಿಕ್ಷಣ ಲಿಂಗಾನುಪಾತ ಉತ್ತಮಪಡಿಸಲು ಆರೋಗ್ಯಮಟ್ಟ ಉತ್ತಮಪಡಿಸಿ ಹೆಣ್ಣು ಮಕ್ಕಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿತ್ತು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಸಿದ ಇಬ್ಬರು ಹೆಣ್ಣುಮಗುವಿಗೆ ಸರ್ಕಾರವು ನಿಶ್ಚಿತ ಠೇವಣಿ ಹೂಡಿ ಮಗುವಿಗೆ 18 ವರ್ಷ ಪೂರ್ಣಗೊಂಡ ನಂತರ ಬಡ್ಡಿ ಸಹಿತ ಪರಿಪಕ್ವ ಹಣ ನೀಡುವ ಉದ್ದೇಶದಿಂದ ಯೋಜನೆ ಆರಂಭಿಸಿತ್ತು. ಅದು ಈಗ 'ಫಲ' ಕೊಡುತ್ತಿದೆ.