Namma hola Namma Dari-ನಿಮ್ಮ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇಲ್ಲವೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ 12.5 ಲಕ್ಷ ರೂ. ಸಹಾಯಧನ

Krushirushi> <ಕಾಲುದಾರಿ> <ಬಂಡಿದಾರಿ> <villagemap> <ಗ್ರಾಮನಕ್ಷೆ> <ಬಂಡಿಜಾಡು> <kaludari> <bandijadu>

Namma hola Namma Dari-ನಿಮ್ಮ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇಲ್ಲವೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ 12.5 ಲಕ್ಷ ರೂ. ಸಹಾಯಧನ

Namma hola Namma Dari-ನಿಮ್ಮ ಜಮೀನಿಗೆ ಹೋಗಲು ಸರಿಯಾದ ರಸ್ತೆ ಇಲ್ಲವೇ? ಹಾಗಾದರೆ ಸರ್ಕಾರದಿಂದ ಸಿಗಲಿದೆ 12.5 ಲಕ್ಷ ರೂ. ಸಹಾಯಧನ

ಕರ್ನಾಟಕ ಸರ್ಕಾರವು "ನಮ್ಮ ಹೊಲ ನಮ್ಮ ದಾರಿ" ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನವನ್ನು ಒದಗಿಸಲಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಾಗಾಣಿಕೆ ಸುಲಭವಾಗಲಿದ್ದು, ಸಾರಿಗೆ ವೆಚ್ಚ ತಗ್ಗಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶವೂ ದೊರೆಯಲಿದೆ. ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ.

ಗ್ರಾಮೀಣ ಭಾಗದಲ್ಲಿ ರೈತರ ಬಳಿ ಜಮೀನು ಇದ್ದರೂ, ಅವುಗಳಿಗೆ ಹೋಗಲು ದಾರಿಯೇ ಇರುವುದಿಲ್ಲ. ಇದಕ್ಕಾಗಿ ಗಾಮಸ್ಥರ ಮಧ್ಯೆ ಜಗಳಗಳು, ಮನಸ್ಥಾಪಗಳು ನಡೆದಿದ್ದಿವೆ. ಇದಕ್ಕೆಲ್ಲಾ ಒಂದು ಪರಿಹಾರವನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಹೊಲ ನಮ್ಮ ದಾರಿ ಎಂಬ ಯೋಜನೆಯನ್ನು ರೂಪಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ನೇರವಾಗಿ ಅವರ ಹೊಲ, ಗದ್ದೆ, ತೋಟ ಮತ್ತು ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವ ಮಹತ್ವಕಾಂಕ್ಷೆಯ ಯೋಜನೆಯೇ "ನಮ್ಮ ಹೊಲ ನಮ್ಮ ದಾರಿ". ಈ ಯೋಜನೆಯು ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಸುಧಾರಣೆಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ ರೈತರು ತಮ್ಮ ಹೊಲಗಳಿಗೆ ಟ್ರ್ಯಾಕ್ಟರ್‌ಗಳನ್ನು ಒಯ್ಯಬಹುದಾದಷ್ಟು ದೊಡ್ಡದಾದ ದಾರಿಯನ್ನು ಮಾಡಿಕೊಳ್ಳಬಹುದಾಗಿದೆ.

ಏನಿದು ನಮ್ಮ ಹೊಲ ನಮ್ಮ ದಾರಿ ಯೋಜನೆ ?

"ನಮ್ಮ ಹೊಲ ನಮ್ಮ ದಾರಿ" ಎಂಬುದು ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಮಹತ್ವದ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ರೈತರ ಹೊಲ, ಗದ್ದೆ ಮತ್ತು ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ, ಪ್ರತಿ ಕ್ಷೇತ್ರಕ್ಕೆ 30 ಕಿ.ಮೀ ನಂತೆ, ಒಟ್ಟಾರೆ 5670 ಕಿ.ಮೀ ರಸ್ತೆಯನ್ನು ಪ್ರತಿ ಕಿ.ಮೀಗೆ ರೂ. 12.50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 3054 ರ ಅನುದಾನಗಳನ್ನು ಒಗ್ಗೂಡಿಸಿ ಬಳಸಲಾಗುತ್ತಿದ್ದು, ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಾಗಾಣಿಕೆ ವೆಚ್ಚ ತಗ್ಗಿಸುವಿಕೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವಿಕೆ ಇದರ ಪ್ರಮುಖ ಪ್ರಯೋಜನಗಳಾಗಿವೆ.

ಯೋಜನೆಯ ಪ್ರಮುಖ ಅಂಶಗಳು

  • ರಸ್ತೆ ಸಂಪರ್ಕ: ರೈತರ ಹೊಲ/ಗದ್ದೆ/ತೋಟ/ಜಮೀನುಗಳಿಗೆ ನೇರ ರಸ್ತೆ ಸಂಪರ್ಕ ಒದಗಿಸುವುದು.
  • ಮಾರುಕಟ್ಟೆ ಸೌಲಭ್ಯ: ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸುಲಭವಾಗಿ ಮತ್ತು ವೇಗವಾಗಿ ಸಾಗಾಣಿಕೆ ಮಾಡಲು ಅನುಕೂಲ ಮಾಡಿಕೊಡುವುದು.
  • ಸಾರಿಗೆ ವೆಚ್ಚ ಕಡಿತ: ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವುದು.
  • ಸುರಕ್ಷಿತ ಸಂಚಾರ: ಸಾರ್ವಜನಿಕರು ಮತ್ತು ರೈತರಿಗೆ ಸುರಕ್ಷಿತ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದು.
  • ಉದ್ಯೋಗ ಸೃಷ್ಟಿ: ಗ್ರಾಮೀಣ ಜನತೆಗೆ ಉದ್ಯೋಗಾವಕಾಶ ಒದಗಿಸಿ, ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವುದು ಮತ್ತು ನಗರ ವಲಸೆಯನ್ನು ತಡೆಯುವುದು.
  • ಜೀವನಮಟ್ಟ ಸುಧಾರಣೆ: ಒಟ್ಟಾರೆಯಾಗಿ ಗ್ರಾಮೀಣ ಜನತೆಯ ಜೀವನಮಟ್ಟವನ್ನು ಸುಧಾರಿಸುವುದು.

ರೈತರಿಗೆ ಆಗುವ ಪ್ರಮುಖ ಲಾಭಗಳು

  • ಟ್ರ್ಯಾಕ್ಟರ್, ಜೀಪ್ ಮತ್ತು ಲೋಡಿಂಗ್ ವಾಹನಗಳು ನೇರವಾಗಿ ಹೊಲಕ್ಕೆ ತಲುಪಲು ಸಾಧ್ಯ.
  • ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಮಳೆಗಾಲದಲ್ಲಿ ಕೆಸರಿನಲ್ಲಿ ಸಿಲುಕುವ ಸಮಸ್ಯೆಗಳಿಗೆ ಪರಿಹಾರ.
  • ಎಂಜಿನರೇಗಾ ಮೂಲಕ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗಾವಕಾಶ ಲಭ್ಯ.
  • ಬೆಳೆಯನ್ನು ಮಾರುಕಟ್ಟೆಗೆ ವೇಗವಾಗಿ ಕೊಂಡೊಯ್ಯಲು ಸಾಧ್ಯವಾಗುತ್ತದೆ.
  • ರಸಗೊಬ್ಬರ, ಬೀಜಗಳು ಮತ್ತು ಕೃಷಿ ಯಂತ್ರಗಳನ್ನು ಸುಲಭವಾಗಿ ಹೊಲಕ್ಕೆ ತರಲು ಸಾಧ್ಯ.
  • ರಾತ್ರಿ ಸಮಯದಲ್ಲೂ ಹೊಲಕ್ಕೆ ಸುರಕ್ಷಿತವಾಗಿ ತೆರಳಲು ಅವಕಾಶ.
  • ಗ್ರಾಮೀಣ ಸಂಪರ್ಕತೆ ಮತ್ತು ಮೂಲಸೌಕರ್ಯಗಳ ಸುಧಾರಣೆ.

ರಸ್ತೆಯನ್ನು ಮಾಡಿಸಲು ಅರ್ಹತಾ ಮಾನದಂಡಗಳೇನು?

  • ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯ ಗ್ರಾಮ ನಕಾಶೆಯಲ್ಲಿ ಅದು 'ಸಾರ್ವಜನಿಕ ರಸ್ತೆ', 'ಬಂಡಿದಾರಿ', ಅಥವಾ 'ಕಾಲುದಾರಿ' ಎಂದು ಅಧಿಕೃತವಾಗಿ ಗುರುತಿಸಲ್ಪಟ್ಟಿರಬೇಕು.
  • ಕೇವಲ ಒಬ್ಬ ರೈತ ಬಳಸುವ ರಸ್ತೆಗಳ ಬದಲು, ಅತೀ ಹೆಚ್ಚು ಬಳಕೆಯಾಗುವ ಮತ್ತು ಅನೇಕ ರೈತರು ಅವಲಂಬಿತರಾಗಿರುವ ರಸ್ತೆಗಳನ್ನು ಮಾತ್ರ ಆಯ್ಕೆ ಮಾಡಬೇಕು.
  • ಆಯ್ಕೆ ಪ್ರಕ್ರಿಯೆಯಲ್ಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಎಂಜಿನರೇಗಾ ತಾಲ್ಲೂಕು ಕಾರ್ಯಕ್ರಮ ಅಧಿಕಾರಿ) ಸಂಬಂಧಪಟ್ಟ ಶಾಸಕರೊಂದಿಗೆ ಸಮಾಲೋಚಿಸಿ ಅಗತ್ಯವಿರುವ ಕಾಮಗಾರಿಗಳನ್ನು ಗುರುತಿಸುತ್ತಾರೆ, ಮತ್ತು ಈ ವೇಳೆ ಕಂದಾಯ ಇಲಾಖೆ ಹಾಗೂ ಪಂಚಾಯತ್‌ ರಾಜ್‌ ಅಭಿಯಂತರ ಇಲಾಖೆ ಅಧಿಕಾರಿಗಳ ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತದೆ.
  • ಅಂತಿಮವಾಗಿ, ಆಯ್ಕೆಯಾದ ಕಾಮಗಾರಿಗಳಿಗೆ ಆಯಾ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕಡ್ಡಾಯವಾಗಿ ಅನುಮೋದನೆ ಪಡೆದು, ಅದರ ನಂತರ ವಿಶೇಷ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತದೆ.
  • ಕಾರ್ಯಕ್ರಮ ಅನುಷ್ಠಾನದ ಎಲ್ಲಾ ಹಂತಗಳಲ್ಲೂ ಜನರ ಸಹಭಾಗಿತ್ವವನ್ನು ಅವಶ್ಯಕವಾಗಿ ತೊಡಗಿಸಿಕೊಳ್ಳಬೇಕು.

ಖಾಸಗಿ ಜಮೀನಿಗೆ ಸರ್ಕಾರದ ಷರತ್ತುಗಳೇನು?

  • ರಸ್ತೆ ನಿರ್ಮಾಣಕ್ಕೆ ಜಮೀನು ನೀಡುವ ಭೂ ಮಾಲೀಕರಿಗೆ ಸರ್ಕಾರದಿಂದ ಯಾವುದೇ ಭೂಸ್ವಾಧೀನ ಪರಿಹಾರ ಹಣ ನೀಡಲಾಗುವುದಿಲ್ಲ.
  • ಜಮೀನು ಮಾಲೀಕರು ಸ್ವ-ಇಚ್ಛೆಯಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ "ನೋಂದಾಯಿತ ದಾನ ಪತ್ರ" ಮೂಲಕ ಜಾಗವನ್ನು ಗ್ರಾಮ ಪಂಚಾಯಿತಿ ಹೆಸರಿಗೆ ನೋಂದಣಿ ಮಾಡಬೇಕು.
  • ರೈತರು ಜಮೀನು ನೀಡಲು ಒಪ್ಪದಿದ್ದರೆ, ಆ ರಸ್ತೆಯನ್ನು ಕೈಬಿಟ್ಟು ಬೇರೊಂದು ರಸ್ತೆಯನ್ನು ಆಯ್ಕೆ ಮಾಡಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಂದು ಕಿ.ಮೀ. ರಸ್ತೆ ನಿರ್ಮಾಣಕ್ಕೆ 12.50 ಲಕ್ಷ ರೂ. ಅನುದಾನ

"ನಮ್ಮ ಹೊಲ ನಮ್ಮ ದಾರಿ" ಯೋಜನೆಯಡಿ ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ನಿಗದಿಪಡಿಸಿದ ಒಟ್ಟು ರೂ. 12.50 ಲಕ್ಷ ವೆಚ್ಚವನ್ನು ಎರಡು ಅನುದಾನಗಳಡಿ ಹಂಚಿಕೆ ಮಾಡಲಾಗುತ್ತದೆ. ಅದರಲ್ಲಿ ಬಹುಪಾಲು, ಅಂದರೆ ರೂ. 9.00 ಲಕ್ಷ ವನ್ನು ಎಂಜಿನರೇಗಾ ಯೋಜನೆಯಡಿಯಲ್ಲಿ ಬಳಸಲಾಗುತ್ತದೆ, ಇದು ಮುಖ್ಯವಾಗಿ 3.75 ಮೀ ಅಗಲದ ರಸ್ತೆ ನಿರ್ಮಾಣದ ಕೆಲಸಗಳು, 1.00 ಕಿ.ಮೀ ಉದ್ದಕ್ಕೆ 0.075 ಮೀಟರ್ ದಪ್ಪದ ಗ್ರೇಡ್‌-2 ಮೆಟಲಿಂಗ್‌ ಮತ್ತು 0.400 ಕಿ.ಮೀ ಉದ್ದಕ್ಕೆ 0.075 ಮೀಟರ್ ದಪ್ಪದ ಗ್ರೇಡ್‌-3 ಮೆಟಲಿಂಗ್‌ ಕಾಮಗಾರಿಗಳನ್ನು ಒಳಗೊಂಡಿರುತ್ತದೆ; ಇನ್ನುಳಿದ ರೂ. 3.50 ಲಕ್ಷ ವನ್ನು ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆ 3054 ರಡಿ ಮೀಸಲಿಡಲಾಗಿದ್ದು, ಇದು ರಸ್ತೆ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಸುವ ಅಗತ್ಯವಿದ್ದಲ್ಲಿ ಆ ವೆಚ್ಚವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಅನುಷ್ಠಾನದ ಮಾರ್ಗಸೂಚಿಗಳೇನು?

  • ಕೂಲಿ ಮತ್ತು ಸಾಮಗ್ರಿಗಳ 60:40 ಅನುಪಾತವನ್ನು ಕಡ್ಡಾಯವಾಗಿ ಪಾಲಿಸುವುದು ಕಡ್ಡಾಯವಾಗಿದೆ.
  • ಅಕುಶಲ ಕೆಲಸವನ್ನು ಕೇವಲ ನೋಂದಾಯಿತ (ಉದ್ಯೋಗ ಚೀಟಿ ಹೊಂದಿದ) ಕೂಲಿಕಾರರಿಂದ ಮಾತ್ರ ನಿರ್ವಹಿಸಬೇಕು.
  • MGNREGA ಯೋಜನೆಯಡಿ ಅನುಮತಿಸಲಾದ ಯಂತ್ರಗಳನ್ನು ಹೊರತುಪಡಿಸಿ ಇತರೆ ಯಾವುದೇ ಯಂತ್ರಗಳನ್ನು ಬಳಸತಕ್ಕದ್ದಲ್ಲ. ಲೆಕ್ಕ ಶೀರ್ಷಿಕೆ 3054ರಡಿ ಮಾತ್ರ ಯಂತ್ರಗಳನ್ನು ಬಳಸಲು ಅವಕಾಶವಿದೆ.
  • ಕೇಂದ್ರ ಸರ್ಕಾರದ ಎಂಜಿನರೇಗಾ ಮಾರ್ಗಸೂಚಿಗಳು ಮತ್ತು KTPP ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
  • ಚಿಕ್ಕ ಸೇತುವೆಗಳು, ಮೋರಿಗಳಂತಹ ಸಂಪರ್ಕ ಸಾಧನಗಳನ್ನೂ ಕೈಗೆತ್ತಿಕೊಳ್ಳಬೇಕು ಮತ್ತು ಲಭ್ಯವಿರುವ ಇತರೆ ಯೋಜನೆಗಳ ಅನುದಾನಗಳೊಂದಿಗೆ (CSR, ಶಾಸಕರ ಅನುದಾನ, ಆರ್ಥಿಕ ದೇಣಿಗೆ) ಒಗ್ಗೂಡಿಸಬೇಕು.
  • ಅನುಷ್ಠಾನದ ಮೊದಲು, ಸಮಯದಲ್ಲಿ ಮತ್ತು ನಂತರದ ಹಂತಗಳಲ್ಲಿ ಕಾಮಗಾರಿಯ ಛಾಯಾಚಿತ್ರಗಳು ಮತ್ತು ಜಿಯೋ-ಟ್ಯಾಗ್ ಅನ್ನು NGSK ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು.

ನಿಮ್ಮ ಊರು/ತೋಟದ ರಸ್ತೆ ಮಂಜೂರು ಮಾಡಿಸುವುದು ಹೇಗೆ?

  • ಲಿಖಿತ ಮನವಿ ಸಲ್ಲಿಸಿ: ಮೊದಲು ನಿಮ್ಮ ಮತ್ತು ಅಕ್ಕಪಕ್ಕದ ರೈತರು ಒಟ್ಟಾಗಿ ಸೇರಿ, ರಸ್ತೆ ನಿರ್ಮಾಣದ ಅಗತ್ಯತೆಯನ್ನು ವಿವರಿಸುವ ಒಂದು ಲಿಖಿತ ಮನವಿಯನ್ನು ತಯಾರಿಸಿ. ಈ ಮನವಿಯನ್ನು ನಿಮ್ಮ ಗ್ರಾಮ ಪಂಚಾಯಿತಿಯ ಪಿಡಿಒ ಅವರಿಗೆ ಸಲ್ಲಿಸಿ, ರಸ್ತೆಯನ್ನು "ನಮ್ಮ ಹೊಲ ನಮ್ಮ ದಾರಿ" ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೋರಿ.
  • ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಿರಿ: ರಸ್ತೆ ಕಾಮಗಾರಿಯು ಗ್ರಾಮ ಸಭೆಯ ಅನುಮೋದನೆಯ ಮೂಲಕವೇ ಆರಂಭವಾಗುವುದರಿಂದ, ಗ್ರಾಮ ಸಭೆ ನಡೆದಾಗ ತಪ್ಪದೇ ಹಾಜರಾಗಿ, ಈ ರಸ್ತೆ ಕಾಮಗಾರಿಯ ವಿಷಯವನ್ನು ಪ್ರಸ್ತಾಪಿಸಿ ಮತ್ತು ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಿ.
  • ಶಾಸಕರ ಗಮನಕ್ಕೆ ತನ್ನಿ: ಈ ಯೋಜನೆಯಡಿ ರಸ್ತೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಶಾಸಕರ ಸಮಾಲೋಚನೆ ಮುಖ್ಯವಾಗಿರುವುದರಿಂದ, ನಿಮ್ಮ ಕ್ಷೇತ್ರದ ಶಾಸಕರಿಗೆ ವೈಯಕ್ತಿಕವಾಗಿ ಮನವಿ ಸಲ್ಲಿಸಿ, ನಿಮ್ಮ ರಸ್ತೆಯ ಮಂಜೂರಾತಿಗಾಗಿ ಒತ್ತಡ ಮತ್ತು ಪ್ರೋತ್ಸಾಹ ನೀಡಿ.
  • ಜಿಯೋ ಟ್ಯಾಗ್ ಮತ್ತು ಉಸ್ತುವಾರಿ: ಕಾಮಗಾರಿ ಆರಂಭವಾದ ನಂತರ, ರಸ್ತೆ ಕಾಮಗಾರಿಯ ಗುಣಮಟ್ಟ ಮತ್ತು ಪಾರದರ್ಶಕತೆಗಾಗಿ, ಕಾಮಗಾರಿ ಪ್ರಾರಂಭವಾಗುವ ಮೊದಲು, ಕಾಮಗಾರಿ ನಡೆಯುವಾಗ ಮತ್ತು ಪೂರ್ಣಗೊಂಡ ನಂತರ ಫೋಟೋ ತೆಗೆದು 'ಜಿಯೋ ಟ್ಯಾಗ್' ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ (ಇದು ಅನುಷ್ಠಾನ ಮಾಡುವ ಅಧಿಕಾರಿಗಳ ಜವಾಬ್ದಾರಿಯಾದರೂ, ಸಾರ್ವಜನಿಕರೂ ಇದರ ಬಗ್ಗೆ ಗಮನ ಹರಿಸಬಹುದು).